ಶಿರಸಿ: ಮತ್ತಿಘಟ್ಟ ಜಲಪಾತಕ್ಕೆ ಶಾಸಕ ಭೀಮಣ್ಣ ಭೇಟಿ : ನಾಪತ್ತೆಯಾದ ಯುವಕನ ಹುಡುಕಾಟ ವೀಕ್ಷಣೆ
ಶಿರಸಿ : ತಾಲೂಕಿನ ಉಂಚಳ್ಳಿಯ ಯುವಕ ಪವನ್ ಜೋಗಿ ಕಾಣೆಯಾಗಿರುವ ಜೋಗನ ಹಕ್ಲು ಜಲಪಾತಕ್ಕೆ ಶನಿವಾರ ಶಾಸಕ ಭೀಮಣ್ಣ ಟಿ ನಾಯ್ಕ ಭೇಟಿ ನೀಡಿ, ನಾಪತ್ತೆಯಾದ ಯುವಕನ ಹುಡುಕುವ ಕಾರ್ಯಾಚರಣೆ ವೀಕ್ಷಿಸಿದರು. ಶಿರಸಿ ತಾಲೂಕಿನ ಮತ್ತಿಘಟ್ಟಾ ವ್ಯಾಪ್ತಿಯ ಜೋಗನ ಹಕ್ಲು ಫಾಲ್ಸ್ ನಲ್ಲಿ ಪವನ್ ಗಣಪತಿ ಜೋಗಿ ಕಾಣೆಯಾಗಿ ಆರು ದಿನಗಳು ಕಳೆದರೂ ಇದುವರೆಗೂ ಪತ್ತೆಯಾಗಿಲ್ಲ. ಪವನ್ ಹುಡುಕಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಜೊತೆಗೆ ಮುಳುಗು ತಜ್ಞರ ತಂಡವಾದ ಶ್ರೀ ಮಾರಿಕಾಂಬ ಲೈಫ್ ಗಾರ್ಡನವರು ಈ ದುರ್ಗಮ ಪ್ರದೇಶದಲ್ಲಿ ಮಳೆಯನ್ನು ಲೆಕ್ಕಿಸದೇ ಹುಡುಕಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.