ಚಿಕ್ಕಮಗಳೂರು: ನಗರದ ವಿವಿಧೆಡೆ ವಾಸವಿದ್ದ ನಿರಾಶ್ರಿತರನ್ನು ರಕ್ಷಿಸಿದ ಪೊಲೀಸ್ ಇಲಾಖೆ
ನಗರದ ಬೀದಿಬದಿಯಲ್ಲಿ ಅನ್ನ, ನೀರಿಲ್ಲದೆ ಗಾಳಿ, ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದ ಬಿಕ್ಷುಕರನ್ನು ಅವರ ಮನವೊಲಿಸಿ ಶಿವಮೊಗ್ಗದ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಡುವಲ್ಲಿ ಇಲ್ಲಿನ ಪೊಲೀಸ್ ಇಲಾಖೆ, ನಗರಸಭೆ ಯಶಸ್ವಿಯಾಗಿದೆ. ನಗರದ ಬಸ್ ನಿಲ್ದಾಣ, ಪಾದಚಾರಿ ಮಾರ್ಗ, ಎಫಿಎಂಸಿ ಯಾರ್ಡ್, ದೇವಾಲಯಗಳ ಆಸುಪಾಸು ಹೀಗೆ ಎಲ್ಲೆಂದರಲ್ಲಿ ಮಲಗುತ್ತಿದ್ದ ಬಿಕ್ಷುಕರಿಗೆ ಸರಿಯಾದ ನೆಲೆ ಜತೆಗೆ ಸೂಕ್ತ ರಕ್ಷಣೆಯೂ ಇರಲಿಲ್ಲ. ಇತ್ತೀಚೆಗೆ ಬಸ್ ನಿಲ್ದಾಣದ ಸಮೀಪ ಮಲಗಿದ್ದ ಬಿಕ್ಷುಕಿ ಮಹಿಳೆ ತಲೆಗೆ ಕಲ್ಲು ಎತ್ತಿಹಾಕಿ ವ್ಯಕ್ತಿಯೋರ್ವ ಕೊಲೆ ಮಾಡಿದ್ದ. ಇದನ್ನೆಲ್ಲ ಅರಿತ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಭಿಕ್ಷುಕರಿಗೆ ನೆಲೆ ಕಲ್ಪಿಸಿದ್ದಾರೆ.