ಮಳವಳ್ಳಿ : ಚಲಿಸುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳ ದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಮಳವಳ್ಳಿ ತಾಲ್ಲೂಕಿನ ದಬ್ಬಹಳ್ಳಿ ಗ್ರಾಮದ ಬಳಿ ಜರುಗಿದೆ. ಮದ್ದೂರು ತಾಲ್ಲೂಕು ಅರುವನ ಹಳ್ಳಿ ಗ್ರಾಮದ ವಾಸಿ ಲೇ ಮರಿಲಿಂಗಯ್ಯ ಎಂಬುವರ ಮಗನಾದ 20 ವರ್ಷದ ಸ್ವಾಮಿ ಎಂಬಾತನೇ ಮೃತಪಟ್ಟ ದುರ್ದೈಯಾಗಿದ್ದಾನೆ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದರ ವಾಹನ ಚಾಲಕನಾಗಿದ್ದ ಈತ ವಾರದ ರಜೆ ಕಾರಣ ಊರಿಗೆ ಬಂದಿದ್ದು ಶನಿವಾರ ಸಾಯಂಕಾಲ 5.30 ರ ಸಮಯದಲ್ಲಿ ಶಿಂಷಾ ಬಳಿಯ ಕೊಂಡದಮ್ಮ ದೇವಸ್ಥಾನ ದಲ್ಲಿ ಸ್ನೇಹಿತರು ಏರ್ಪಡಿಸಿದ್ದ ದೇವರ ಸೇವೆಯಲ್ಲಿ ಭಾಗವಹಿಸಿ ಊಟ ಮುಗಿಸಿಕೊಂಡು ವಾಪಸ್ ಊರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.