ಒಂದು ಕಡೆ ನರೇಂದ್ರ ಮೋದಿಯವರ ಅಭಿವೃದ್ಧಿ, ವಿಕಾಸ, ಇನ್ನೊಂದು ಕಡೆ ನಿತೀಶ್ ಕುಮಾರ್ ಅವರ ಸಾಮಾಜಿಕ ನ್ಯಾಯವನ್ನು ಗಮನಿಸಿ ಬಿಹಾರದ ಜನತೆ ಮುದ್ರೆಯನ್ನು ಒತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ವಿಶ್ಲೇಷಿಸಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿತೀಶ್ ಕುಮಾರ್ ಅವರು 20 ವರ್ಷಗಳ ಆಡಳಿತದ ಮೂಲಕ ಜನಮನದಲ್ಲಿದ್ದಾರೆ ಎಂದು ನುಡಿದರು. ಇದರಿಂದ ನಾವು (ಎನ್ಡಿಎ) 202 ಸೀಟುಗಳನ್ನು ಗೆದ್ದಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ಸಿನವರು ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಿದ್ದಾರೆ; ಬುದ್ಧಿ ಭ್ರಮೆ ಆಗಿದೆ. ಇಡೀ ದೇಶದಲ್ಲಿ ಜನರು ಅವರನ್ನು ತಿರಸ್ಕರಿಸುತ್ತಿದ್ದಾರೆ ಎಂದರು.