ಶಿರಸಿ: ಲೋಕಾಯುಕ್ತ ದಾಳಿ : ಎಪಿಎಮ್ಸಿ ಜಿಯೋ ಕಚೇರಿ ಬಳಿ ಶಿರಸಿ ನಗರಸಭೆ ಸದಸ್ಯ, ಅಧಿಕಾರಿ ಬಂಧನ
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಸಭೆಗೆ ಗ್ರಹಚಾರ ಹಿಡಿದಂತೆ ಕಾಣುತ್ತಿದೆ. ಇತ್ತೀಚಿಗೆ ಪೈಪ್ ಕಳ್ಳತನದಲ್ಲಿ ನಗರಸಭೆಯವರೇ ಭಾಗಿಯಾದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ನಗರಸಭೆ ಸದಸ್ಯ ಮತ್ತು ಅಧಿಕಾರಿ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ. ಶಿರಸಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಾಲಿ ಸದಸ್ಯ ಗಣಪತಿ ನಾಯ್ಕ ಮತ್ತು ಕಂದಾಯ ಅಧಿಕಾರಿ ಆರ್.ಎಮ್.ವೆರ್ಣೇಕರ ಅವರನ್ನು ಶಿರಸಿ ನಗರದ ಎಪಿಎಮ್ಸಿ ಹೊರಾಂಗಣದ ಜಿಯೋ ಕಚೇರಿ ಸಮೀಪದಲ್ಲಿ ರಮೇಶ ಹೆಗಡೆ ಎಂಬುವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಬಂಧಿಸಲಾಗಿದೆ.