ದಾಂಡೇಲಿ : ಹಸಿ ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಮಾಲು ಸಹಿತ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ಕಲಬಾವಿ ಗಸ್ತಿನಲ್ಲಿ ನಡೆದಿದೆ. ಈ ಬಗ್ಗೆ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕಾರ್ಯಾಲಯವು ಮಾಧ್ಯಮಕ್ಕೆ ಮಾಹಿತಿ ನೀಡಿದೆ. ಶನಿವಾರ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ವಿಭಾಗದ ಕುಳಗಿ ವನ್ಯಜೀವಿ ವಲಯದ ಕೇಗದಾಳ ಶಾಖೆಯ ಕಲಬಾವಿ ಗಸ್ತಿನಲ್ಲಿ ಶ್ರೀಗಂಧದ ಮರವನ್ನು ಕಟಾವಣೆ ಮಾಡಿ ಸಾಗಾಟ ಮಾಡುವ ಉದ್ದೇಶದೊಂದಿಗೆ ಆಗಮಿಸಿದ್ದ ಕಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ಕಳ್ಳರು ಪರಾರಿಯಾಗಿದ್ದಾರೆ.