ಬೆಂಗಳೂರು ಉತ್ತರ: ನಗರತ್ ಪೇಟೆಯಲ್ಲಿ ಅಗ್ನಿ ಅವಘಡ ಸ್ಥಳಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ, ಪರಿಶೀಲನೆ
ನಗರತ್ ಪೇಟೆಯಲ್ಲಿ ಅಗ್ನಿಅವಘಡ ಸಂಭವಿಸಿದ ಸ್ಥಳಕ್ಕೆ ಆಗಸ್ಟ್ 16ರಂದು ಸಂಜೆ 4 ಗಂಟೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, "ಎಫ್ಎಸ್ಎಲ್ನವರು ಸ್ಥಳಕ್ಕೆ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ವರದಿ ಬಂದ ನಂತರ ಘಟನೆಯ ಬಗ್ಗೆ ಗೊತ್ತಾಗಲಿದೆ. ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡುತ್ತೇನೆ.ಇದೊಂದು ದುರದೃಷ್ಟಕರ ಘಟನೆ. ಈ ರೀತಿ ಆಗಬಾರದಾಗಿತ್ತು. ಚಿಕ್ಕ ಜಾಗದಲ್ಲಿ ನಾಲ್ಕೈದು ಮಹಡಿಯ ಕಟ್ಟಡಗಳನ್ನು ಕಟ್ಟಿದ್ದಾರೆ. ಈ ಭಾಗದಲ್ಲಿ ಸಾವಿರಾರು ಬಿಲ್ಡಿಂಗ್ಗಳು ಇದೇ ರೀತಿ ಇವೆ. ಈ ಬಗ್ಗೆ ಬಿಬಿಎಂಪಿಯವರು ಗಮನಹರಿಸಬೇಕು" ಎಂದರು