ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಹಾಗೂ ಸರಣಿ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಅಕ್ಟೋಬರ್ 18 ರಂದು ಶನಿವಾರ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಯಿತು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ. ಅಕ್ಟೋಬರ್ 19 ರಂದು ರವಿವಾರ, 20ರಂದು ಸೋಮವಾರ ನರಕ ಚತುರ್ದಶಿ, ಸಾರ್ವಜನಿಕ ರಜೆ, 21ರಂದು ಮಂಗಳವಾರ ದೀಪಾವಳಿ ಅಮಾವಾಸ್ಯೆ ಹಾಗೂ 22ರಂದು ಬುಧವಾರ ಬಲಿಪಾಡ್ಯ ನಿಮಿತ್ಯ ಸಾರ್ವಜನಿಕ ರಜೆ ಹೀಗೆ ಸರಣಿ ರಜೆ ಇರುವ ಪ್ರಯುಕ್ತ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ನೆಲೆಸಿರುವ ಹೊರ ಊರುಗಳ ಜನರು ಹಬ್ಬದ ಆಚರಣೆಗಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಿದರು.