ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಚಿನ್ನ ಗೆದ್ದು ತವರಿಗೆ ಬಂದಿಳಿದ ಚಿಕ್ಕಮಗಳೂರಿನ ವಿದ್ಯಾರ್ಥಿನಿಯರು..!.
ಪಂಜಾಬ್ನ ಬರ್ನಾಲಾದಲ್ಲಿ ನಡೆದ ರಾಷ್ಟ್ರಮಟ್ಟದ ಅಂಡರ್-19 ಬಾಲಕಿಯರ ಕಬ್ಬಡಿ ವಿಭಾಗದಲ್ಲಿ ಕರ್ನಾಟಕದ ಬಾಲಕಿಯರ ತಂಡ ಸ್ವರ್ಣಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. 13 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡದಲ್ಲಿ ಚಿಕ್ಕಮಗಳೂರಿನ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಸ್ಥಾನ ಪಡೆದು ಉತ್ತರ ಭಾರತದ ತಂಡಗಳೊಂದಿಗೆ ನಡೆದ ಪ್ರಬಲ ಸ್ಪರ್ಧೆಯಲ್ಲಿ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ತಂಡದ ವಿಜೇತ ವಿದ್ಯಾರ್ಥಿನಿಯರಾದ ಸಿಂಚನ ಜಿ., ಮೋಕ್ಷ ಲೋಕೇಶ್, ಜ್ಞಾನ ಎನ್. ಗೌಡ, ಸಾನ್ವಿ ಕೆ ಆಳ್ವ, ಹಿತೈಷಿ ಗೌಡ, ಶ್ರೇಷ್ಠ ಎಸ್. ಶೆಟ್ಟಿ ಹಾಗೂ ತರಬೇತುದಾರ ಕುಮಾರ್ ಅವರೊಂದಿಗೆ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.