ಕಲಬುರಗಿ: ದತ್ತ ನಗರದಲ್ಲಿ ತರಕಾರಿ ಖರೀದಿ ಮಾಡಿ ಮನೆಗೆ ಮರಳುತ್ತಿದ್ದ ವೃದ್ಧೆಗೆ ಶಾಕ್: ದಾರಿ ಕೇಳಿ ಚಿನ್ನದ ಸರ ಕಸಿದು ಪರಾರಿ
ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದತ್ತನಗರದಲ್ಲಿ ವೃದ್ಧೆಯೊಬ್ಬರ ಕೊರಳಿನ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ. ದತ್ತ ನಗರ ನಿವಾಸಿ 61 ವರ್ಷದ ಕೀರ್ತಮ್ಮ ಅವರು ತರಕಾರಿ ಖರೀದಿ ಮಾಡಿ ಮನೆಗೆ ಮರಳುತ್ತಿದ್ದ ವೇಳೆ, ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ದಾರಿ ಕೇಳುವ ನೆಪದಲ್ಲಿ ನಿಲ್ಲಿಸಿ, ಅವರ ಕೊರಳಿನ ಸುಮಾರು 38 ಗ್ರಾಂ ತೂಕದ ಎರಡು ಎಳೆ ಚಿನ್ನದ ಸರವನ್ನು ಕಸಿದುಕೊಂಡು ಬಿದ್ದಾಪೂರ ಕಾಲೋನಿ ಕಡೆಗೆ ಪರಾರಿಯಾಗಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.