ಹುಬ್ಬಳ್ಳಿಯಿಂದ ಬಂದಿರುವ ವಜ್ರದ ಗಣೇಶ ನಗರದ ಪ್ರಮುಖ ಆಕರ್ಷಣೆಯಾಗಿದೆ.ನಗರದ ಐಜೂರಿನ ನೇತಾಜಿ ಪಾಪ್ಯುಲರ್ ಸ್ಕೂಲ್ ಬಳಿಯ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಪ್ರತಿಷ್ಠಾಪನೆ ಮಾಡಿರುವ ಈ ಗಣೇಶ ಮೂರ್ತಿಯ ಬೆಲೆ ಬರೋಬ್ಬರಿ ₹5.5 ಲಕ್ಷ! ಹುಬ್ಬಳ್ಳಿಯ ಬಮ್ಮಾಪುರ ಓಣಿಯ ಕಲಾವಿದ ಮಹೇಶ ಮುರಗೋಡ ಅವರ ಕುಟುಂಬ ಪ್ರತಿ ವರ್ಷ ತಯಾರಿಸುವ ದುಬಾರಿ ಗಣೇಶ ಮೂರ್ತಿ ಈ ಸಲ ರಾಮನಗರದಲ್ಲಿ ಬುಧವಾರ ಪ್ರತಿಷ್ಠಾಪನೆಯಾಗುತ್ತಿರುವುದು ವಿಶೇಷವಾಗಿದೆ. ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಜೇಡಿಮಣ್ಣಿನ ಗಣೇಶ ಮೂರ್ತಿಗೆ ಅಮೆರಿಕದಿಂದ ತರಿಸಿರುವ ಒಂಬತ್ತು ಬಗೆಯ ರಂಗುರಂಗಿನ 4 ಲಕ್ಷ ವಜ್ರಗಳನ್ನು ಲೇಪನ ಮಾಡಲಾಗಿದೆ.