ಹಳಿಯಾಳ: ಪ್ರಸಿದ್ದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿಸಿ ದೇವಸ್ಥಾನದ ಬಾಗಿಲು ಮತ್ತು ಚೌಕಟ್ಟಿಗೆ ಅಳವಡಿಸಿದ್ದ 5 ಕೆಜಿ ಯಷ್ಟು ಬೆಳ್ಳಿ ಕವಚ ಕಳ್ಳತನ ಮಾಡಿರುವ ಬಗ್ಗೆ ಇಂದು ಮಂಗಳವಾರ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಅಂದಾಜು 6 ಲಕ್ಷ ರೂಪಾಯಿಗೂ ಅಧಿಕ ಬೆಲೆಯ ಬೆಳ್ಳಿ ಕವಚವನ್ನು ಕಳ್ಳರು ಎಗರಿಸಿದ್ದಾರೆ. ನೂತನ ಬಸ್ ನಿಲ್ದಾಣ ಮತ್ತು ಪೋಲಿಸ್ ಠಾಣೆಯ ಅನತಿ ದೂರದಲ್ಲಿರುವ ಈ ದೇವಸ್ಥಾನ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದೆ. ವನಶ್ರೀ ವೃತ್ತ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಎಂದು ಕರೆಯುವ ಸದಾ ಜನರ ಚಲನವಲನ ಇರುವ ಪ್ರದೇಶದಲ್ಲೇ ಕಳ್ಳರು ಕೈಚಳಕ ತೋರಿಸಿರುವುದು ವಿಶೇಷವಾಗಿದೆ.