ಬಾಳೆ ಬೆಳೆದವರ ಬಾಳು ಬಂಗಾರ ಎಂಬ ಮಾತು ಏಕೋ ಈಗೀಗ ಸುಳ್ಳಾಗುತ್ತಿದ್ದು ಬಾಳೆ ಬೆಲೆ ಪಾತಾಳಕ್ಕೆ ಇಳಿದ ಪರಿಣಾಮ ರೈತ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾನೆ. ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ ರೈತ ಕುಮಾರಸ್ವಾಮಿತ ತಮ್ಮ 4 ಎಕರೆ ಜಮೀನಿನಲ್ಲಿ ಪಚ್ಚಬಾಳೆ ಹಾಕಿದ್ದು ಬೆಲೆ ಇಲ್ಲದಿದ್ದರಿಂದ ಫಸಲನ್ನು ನಾಶ ಮಾಡಿದ ಘಟನೆ ಬುಧವಾರ ನಡೆದಿದೆ. ಜಿ.9 ತಳಿಯ ಬಾಳೆ ಬೆಳೆ ಹುಲುಸಾಗಿ ಜಮೀನಿನಲ್ಲಿ ಬೆಳೆದಿದ್ದು ಗೊನೆಗಳು ಕಟಾವಿಗೆ ಬಂದಿವೆ. ಆದರೆ, ಬೆಲೆ ಇಲ್ಲದೆ ಕೇಳುವವರು ಇಲ್ಲದಂತಾಗಿ ಹಣ್ಣಾಗಿ ಬಾಳೆ ಉದುರುತ್ತಿದೆ. 4-5 ಲಕ್ಷ ರೂ. ವೆಚ್ಚ ಮಾಡಿ ಬಾಳೆ ಬೆಳೆದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಬಾಳೆ ಫಸಲನ್ನು ರೊಟವೇಟರ್ ಮೂಲಕ ರೈತ ನಾಶ ಮಾಡುತ್ತಿದ್ದಾರೆ.