ಪೆರ್ನೆಯಲ್ಲಿ ದನ ಕಳವು ಮಾಡಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಂಡು ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪದಲ್ಲಿ ನರಸಿಂಹ ಶೆಟ್ಟಿ ಮಾಣಿ ಎಂಬಾತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆ 4 ರಂದು ರಾತ್ರಿ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ಮನೆ ಬಳಿಯಿರುವ ಹಟ್ಟಿಯಿಂದ ಕಿಡಿಗೇಡಿಗಳು ದನವೊಂದನ್ನು ಕಳವು ಮಾಡಿ ಹತ್ಯೆ ಮಾಡಿರುವ ಘಟನೆಯ ಬಗ್ಗೆ ನರಸಿಂಹ ಶೆಟ್ಟಿ ಮಾಣಿ ಎಂಬಾತನು ಮಾತನಾಡುವ ವೇಳೆ, ಘಟನೆಯ ಬಗ್ಗೆ ಸುಳ್ಳು ಸುದ್ದಿಯನ್ನು ನೀಡಿರುವುದಲ್ಲದೇ, ಧರ್ಮಗಳ ನಡುವೆ ಕೋಮು ದ್ವೇಷ ಹಾಗೂ ವೈರತ್ವ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವುದು ತಿಳಿದುಬಂದಿದೆ.