ಸಾಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಭತ್ತ, ಶುಂಠಿ, ಅಡಿಕೆ, ಜೋಳದ ಬೆಳೆ ಸಂಪೂರ್ಣ ನಾಶವಾಗಿದ್ದು, ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಗುರುವಾರ ಸಂಜೆ 5 ಗಂಟೆಗೆ ಸಂಯುಕ್ತ ರೈತ ಸಂಘದ ವತಿಯಿಂದ ಎಸಿಗೆ ಸಾಗರದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಂದ ಅಧ್ಯಕ್ಷ ಮಂಜಪ್ಪ ಎಂ.ಬಿ., ಅಧಿಕ ಮಳೆಯಿಂದಾಗಿ ತಾಳಗುಪ್ಪ ಹೋಬಳಿಯಲ್ಲಿ ವರದಾನದಿ, ಕನ್ನಹೊಳೆ, ಮಾವಿನಹೊಣೆ ಮತ್ತು ಕಣಸೆಹೊಳೆ ಪ್ರವಾಹದಿಂದ ಸುಮಾರು 5 ಸಾವಿರ ಎಕರೆಯಲ್ಲಿ ಫಸಲು ನಷ್ಟವಾಗಿದೆ. ಈ ವರ್ಷ ಮಳೆಗಾಲವು ಒಂದು ತಿಂಗಳು ಮೊದಲೆ ಪ್ರಾರಂಭವಾಗಿದ್ದು ಇನ್ನೂ ಮಳೆ ಮುಂದುವರೆದಿದೆ. ಮಳೆಗಾಲ ತಡ ಇದೆ ಎಂದು ಕೃಷಿ ಮಾಡಿದ್ದ ರೈತರು ಈಗ ಫಸಲು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು.