ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ಪಣ ತೊಟ್ಟಿದ್ದು, ಕಳೆದ ಹಲವು ದಿನಗಳಿಂದ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದೆ. ಈ ನಡುವೆ ಸೋಮವಾರ ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಕಾಮಗಾರಿ ಪರಿಶೀಲನೆ ಮಾಡಿದ್ದಾರೆ. ಯಲಹಂಕದ ಬಾಗಲೂರು ಮುಖ್ಯರಸ್ತೆ, ಎಂಎಸ್ ಪಾಳ್ಯದ ಸಂದೀಪ್ ಉಣ್ಣೀಕೃಷ್ಣನ್ ರೋಡ್ ಮತ್ತು ಈಜಿಪುರದ ಪ್ಲೈಓವರ್ ಕಾಮಗಾರಿಯ ವೀಕ್ಷಣೆ ಮಾಡಿದ ಡಿಕೆಶಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ಗಮನಕ್ಕೆ ತಂದಿದ್ದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ರಸ್ತೆ ಗುಂಡಿ ಗಮನ ತಂತ್ರಾಂಶ ಸಿದ್ದಪಡಿಸಿದ್ದೇವೆ ಎಂದರು.