ಭಿನ್ನ,ವಿಭಿನ್ನ ಸಾಧ್ಯತೆಗಳ ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ ಸಣ್ಣತನಗಳಿಂದ ಮುಕ್ತರಾದವರು. ಹೀಗಾಗಿ ಇವರೆಲ್ಲರೂ ಬುದ್ದನ ಮಕ್ಕಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಬಣ್ಣಿಸಿದ್ದಾರೆ.ನಗರದ ಬಾಲಭವನದಲ್ಲಿ ಆಗಸ್ಟ್ 22ರಂದು ಬೆಳಿಗ್ಗೆ 11 ಗಂಟೆಗೆ ನಡೆದ "ವಿಶೇಷ ಚೇತನ ಮಕ್ಕಳ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಿನ್ನ ಚೇತನರನ್ನ ಸಮಾಜದ ಅಸಹಜ ರೂಢಿಗತ ಕಣ್ಣುಗಳಿಂದ ನೋಡುವುದಕ್ಕಿಂತ ಮನುಷ್ಯ ಸಹಜ ಒಳಗಣ್ಣುಗಳಿಂದ ಗಮನಿಸಬೇಕಿದೆ.ಈ ಮಕ್ಕಳು ಜೀವನ ಪರ್ಯಂತ ಮಕ್ಕಳಾಗೇ ಇರುತ್ತಾರೆ. ಅಂದರೆ ಮಗುವಿನ ಸಹಜ ನಿಷ್ಕಲ್ಮಷ ಸ್ವಭಾವ ಜೀವನವಿಡೀ ಇರುತ್ತದೆ" ಎಂದರು.